(೧೯೩೨-೨೦೧೭) ಭುಜಂಗ ಶೆಟ್ಟಿ ಕುರ್ಕಾಲ್, ಮುಂಬಯಿನ ವಡಾಲ ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿಯ ಪ್ರೌಢಶಾಲೆ,’ ಮತ್ತು ’ಗುರುನಾರಾಯಣ ರಾತ್ರಿ ಶಾಲೆ,’ ಗಳಲ್ಲಿ ಎರಡುವರೆ ದಶಕಗಳಿಗಿಂತ ಹೆಚ್ಚುಕಾಲ ದುಡಿದು, ಈಗ ನಿವೃತ್ತಜೀವನ ನಡೆಸುತ್ತಿದ್ದಾರೆ. == ಜನನ ಹಾಗೂ ಬಾಲ್ಯ == ಬಿ. ಎಸ್. ಕುರ್ಕಾಲರು, ೧೯೩೨ ರಲ್ಲಿ, ಉಡುಪಿಯ ’ಕುಂಜಾರುಗಿರಿ,’ ಯಲ್ಲಿ, ಜನಿಸಿ ಅನಂತರ ಮಾಯಾನಗರಿ, ಮುಂಬಯಿನ್ನು ಪ್ರವೇಶಿಸಿ, ಭಾವಗೀತೆಗಳ ಕವಿಯೆಂದೇ ಗುರುತಿಸಲ್ಪಟ್ಟಿದ್ದಾರೆ. ಆದರ್ಶ ಶಿಕ್ಷಕ, ಅಂಕಣಕಾರ, ನಾಟಕಕಾರ ಹಾಗೂ ಕವಿಯೆಂದು ಹೆಸರುಮಾಡಿದ ಅವರು, ತಮ್ಮ ಪ್ರತಿಭೆಯ ನಾನಾಮುಖಗಳನ್ನು ಕನ್ನಡ ನಾಡು-ನುಡಿಗಳಿಗಾಗಿ ಮುಡಿಪಾಗಿಟ್ಟಿದ್ದಾರೆ. ಸದಾ ಸಾಹಿತ್ಯಕೃಷಿಯಲ್ಲಿ ನಿರತರಾಗಿದ್ದಾರೆ. == ಮುಂಬಯಿನಗರದಲ್ಲಿ ಮಾಡಿದ ಸಾಹಿತ್ಯ ಕೃಷಿ == ’ನನ್ನ ನಿನ್ನ ಅಂತರಂಗ,’ ಅವರ ಚೊಚ್ಚಲ ಕವನ ಸಂಕಲನ. ’ಶ್ರಾವಣ’, ’ಲಹರಿ’, ’ರಾಗರಶ್ಮಿ’, * ’ಚಿಲಿಪಿಲಿ,’ ಮುಂತಾದ ಕವನ ಗುಚ್ಛಗಳನ್ನು ಬರೆದು ಪ್ರಕಟಿಸಿರುತ್ತಾರೆ. ’ತಿಂಗಳತೋರಣ’, ’ಪತ್ರಂ’, ’ಪುಷ್ಪಂ’, ’ವಿನೋದಕುಮಾರನ ಸ್ವಗತ’, ಕೃತಿಗಳು. ’ಮಂತ್ರಪುಷ್ಪ,’ ಎಂಬ ಪತ್ರಿಕೆಯ ಸಂಪಾದಕರಾಗಿದ್ದಾರೆ. ಗೋರೂರವರ, ’ಭೂತಯ್ಯನ ಮಗ ಅಯ್ಯು’, ಮಾಸ್ತಿಯವರ ’ಕಾಕನಕೋಟೆ,’ ಯನ್ನು ’ಅಮರಚಿತ್ರಕಥಾ,’ ಮಾಲಿಕೆಗೆ ಬರೆದ ಹೆಗ್ಗಳಿಕೆ. ’ಲಕ್ಷ್ಮೀ ಛಾಯ ವಿಚಾರವೇದಿಕೆ,’ ಯನ್ನು ಸ್ಥಾಪಿಸಿದ್ದಾರೆ. ಇದರಮುಖೇನ ’ಜಯಂತಿ’, ’ಕುರ್ಕಾಲ್ ಸಾಹಿತ್ಯ’ ಪ್ರಶಸ್ತಿಯನ್ನು ಪ್ರತಿವರ್ಷವೂ ನಡೆಸಿಕೊಂಡುಬರುತ್ತಿದ್ದಾರೆ. == ಉತ್ತಮ ನಾಟಕಗಳ ರಚನೆ == ’ಮೇವಾಡದ ಭಾಗ್ಯಲಕ್ಷ್ಮೀ’, ’ಛಾಯಾ,’ 'ಸಿದ್ದಾರ್ಥ,’ ಮುಂತಾದ ಅವರ ಪ್ರಸಿದ್ಧ ನಾಟಕಗಳು, ಮುಂಬಯಿನಗರದಲ್ಲಿ ಜನಪ್ರಿಯಗೊಂಡಿವೆ. ಮುಂಬಯಿ ನ ಹಿರಿಯ ಕವಿ, ಸಾಹಿತಿ, 'ಬಿ. ಎಸ್. ಕುರ್ಕಾಲ್,' ರವರು, ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ, ಭಾಗವಹಿಸುತ್ತಾರೆ. ಅನೇಕ ಲೇಖನಗಳನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. == ಪ್ರಶಸ್ತಿಗಳು == ಕನ್ನಡ ಸಾಹಿತ್ಯ ಪರಿಷತ್ತಿನ, ’ಕರ್ನಾಟಕ ಶ್ರೀ’, ಪ್ರಶಸ್ತಿ. ಮುಂಬಯಿ ಕರ್ನಾಟಕ ಸಂಘ, ’ಸಾಧನ ಶಿಖರ ಪ್ರಶಸ್ತಿ,’ ೨೦೦೮ ನೇ ಸಾಲಿನ 'ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ,' ೨೦೦೮ ರ 'ಚಿಲಿಪಿಲಿ, ಕವನಸಂಕಲನಕ್ಕೆ, ಅತ್ಯುತ್ತಮ ಮಕ್ಕಳ ಸಾಹಿತ್ಯಕೃತಿಯೆಂದು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ಇದು, 'ಅಭಿಜಿತ್ ಪ್ರಕಾಶನ ಸಂಸ್ಥೆ,' ಯ ಪ್ರಕಾಶನ. == ’ಮುಂಬಯಿನ ಬಂಟರ ಭವನ’ದಲ್ಲಿ ಗೌರವಾರ್ಪಣೆ’ == ೨೦೦೯ ರ ನವೆಂಬರ್, ೨೮ ರಂದು, ಸಂಜೆಗೆ, ಮುಂಬಯಿನಗರದ, ಕುರ್ಲಾ (ಪೂ) ’ಬಂಟರ ಭವನದ ಸಭಾಗೃಹ’ದಲ್ಲಿ, ’ಶ್ರೀ ಭುಜಂಗ ಶೆಟ್ಟಿ ಕುರ್ಕಾಲರ ಅಭಿನಂದನಾ ಗ್ರಂಥ ಸಮಿತಿ’ಯ ವತಿಯಿಂದಮುಂಬಯಿನ ಹಿರಿಯ ಖ್ಯಾತ ಕವಿ, ಖ್ಯಾತ ಶಿಕ್ಷಕ, ’ಬಿ. ಎಸ್. ಕುರ್ಕಾಲ’ರ ೭೭ ನೇ ವರ್ಷದ, ಸಂದರ್ಭದಲ್ಲಿ ಶಾಲುಹೊದಿಸಿ, ಫಲಪುಷ್ಪ, ಸನ್ಮಾನಪತ್ರ, ಹಾಗೂ ನಗದು ಹಣ ೨ ಲಕ್ಷರೂಪಾಯಿ ಧನವಿತ್ತು, ಗೌರವಿಸಲಾಯಿತು. ಈ ಸಂದರ್ಭದಲ್ಲಿ ೩ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. == ಸಮಾರಂಭದಲ್ಲಿ ಉಪಸ್ಥಿತರಿದ್ದ ಪ್ರಮುಖರು == ’ಕ. ಸಾ. ಪ. ಮಂಗಳೂರು ಅಧ್ಯಕ್ಷ’, ಪ್ರದೀಪ್ ಕುಮಾರ್ ಕಲ್ಕೂರ, ಬಳ್ಳಾರಿಯ ಖ್ಯಾತ ಉದ್ಯಮಿ, ಸುರೇಶ್. ಪಿ. ಶೆಟ್ಟಿ,, ಪುತ್ತೂರಿನ ಮಾಜೀ ಶಾಸಕ, ಶಕುಂತಲಾ ಟಿ ಶೆಟ್ಟಿ, ಕಸಾಪ, ಮಾಜೀ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಅಭಿನಂದನಾ ಗ್ರಂಥದ ಪದಾಧಿಕಾರಿಗಳಾದ, ಅಧ್ಯಕ್ಷ ಸುಬ್ಬರಾವ್, ಕಾರ್ಯದರ್ಶಿ, ಡಾ. ಜಿ.ಎನ್. ಉಪಾಧ್ಯ,, ಜಂಟಿಕಾರ್ಯದರ್ಶಿಗಳಾದ, ವೇಣುಗೋಪಾಲ್ ಎಸ್. ಶೆಟ್ಟಿ,, ಪೇಟೆಮನೆ ಪ್ರಕಾಶ್ ಕೆ. ಶೆಟ್ಟಿ, ’ಕ. ಸಾ. ಪ. ಮಹಾರಾಷ್ಟ್ರ ಘಟಕ’ದ ಕಾರ್ಯದರ್ಶಿ ಡಾ. ಕರುಣಾಕರ ಶೆಟ್ಟಿ ಪಣಿಯೂರು, ’ಗಿರಿಕುಂಜರ’ದ ಲೇಖಕ, ದಿನೇಶ್ ಶೆಟ್ಟಿ ರೆಂಜಾಳ, ಮುಂತಾದವರಿದ್ದರು. == ಬಿ.ಎಸ್.ಕುರ್ಕಾಲ್ ರವರ ಸಾಹಿತ್ಯ ಸಂಭ್ರಮ == ಮುಂಬಯಿ ವಿಶ್ವವಿದ್ಯಾಲಯದ ಕನ್ನಡವಿಭಾಗ, ಮತ್ತು ಲಕ್ಷ್ಮಿ ಛಾಯಾ ವಿಚಾರವೇದಿಕೆ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕುರ್ಕಾಲರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. == ನಿಧನ == ಶ್ರೀ ಬಿ.ಎಸ್.ಕುರ್ಕಾಲರು,(೮೫) ೧೨, ನವೆಂಬರ್,೨೦೧೭ ರಂದು ಬೋರಿವಲಿಯ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಪತ್ನಿ, ಒಬ್ಬ ಮಗ,ಹಾಗೂ ಒಬ್ಬ ಮಗಳಿದ್ದಾರೆ. ಹಾಡುವ ಕವಿಯೆಂದೇ ಮುಂಬಯಿ ಮಹಾನಗರದ ಕನ್ನಡಿಗರಿಗೆ ಪರಿಚಿತರಾಗಿರುವ ಕುರ್ಕಾಲ್, ಮೃದುಸ್ವಾಭಾವದ ಮಿತಭಾಷಿ. ಕವಿತೆ, ನಾಟಕ, ಅಂಕಣಗಳು,ಮೊದಲಾದ ಪ್ರಕಾರಗಳಲ್ಲಿ ಹೆಸರಾಂತ ಭುಜಂಗ ಶೆಟ್ಟಿ ಕುರ್ಕಾಲರದು ವೈವಿಧ್ಯಮಯ ವ್ಯಕ್ತಿತ್ವ. ಮಕ್ಕಳಿಗೆ ಅವರು ಹೆಚ್ಚು ಪರಿಚಿತರಾಗಿರುವುದು, ಅವರೊಬ್ಬ ಸಮರ್ಥ ಶಿಕ್ಷಕರಾಗಿ. ಲಕ್ಷ್ಮೀ ಛಾಯಾ ವಿಚಾರವೇದಿಕೆಯನ್ನು ಹುಟ್ಟಿಹಾಕಿ ಅದರ ಸಂಚಾಲಕರಾಗಿ ದುಡಿಯುತ್ತಿದ್ದರು. == ಉಲ್ಲೇಖಗಳು == == ಬಾಹ್ಯಸಂಪರ್ಕಗಳು == ಕರ್ನಾಟಕ ಮಲ್ಲ, ೨೪-೧೧-೨೦೧೭,ಪು-೬, 'ಕನ್ನಡ ಕಾವ್ಯಕ್ಕೆ ಬಿ.ಎಸ್. ಕುರ್ಕಾಲ್ ರವರ ಕೊಡುಗೆ'-ಡಾ.ಜಿ.ಎನ್.ಉಪಾಧ್ಯ